Thursday, June 23, 2022

ಮಕ್ಕಳ ಸಾಹಿತ್ಯ ನೀತಿಕತೆ ಹುಂಬತನ ಒಳ್ಳೆಯದಲ್ಲ



ಬತ್ತದ ತೊರೆ ಸ್ನೇಹ ಬಳಗ,

 ಕಾರಂತಜ್ಜನ ನೆರಳಿನಡಿಯಲ್ಲಿ..

( ಕಲೆ ಹಾಗೂ ಸಾಹಿತ್ಯ ವೇದಿಕೆ )

➖➖➖➖➖➖➖➖➖➖➖

ದಿನಾಂಕ ೨೨/೦೬/೨೦೨೨ ಬುಧವಾರ ಮಕ್ಕಳ ಸಾಹಿತ್ಯ ವಿಭಾಗದಲ್ಲಿ ಮಕ್ಕಳ ನೀತಿಕತೆ  ಸ್ಪರ್ಧೆಗಾಗಿ

ವಿಷಯ: ಹುಂಬತನ ಒಳ್ಳೆಯದಲ್ಲ ಎಂಬ ವಿಷಯದ ಕುರಿತಾದ ನೀತಿಕತೆಗಳ ಸಂಗ್ರಹ

(೧)

ಶೀರ್ಷಿಕೆ: ಅವಿವೇಕದ ಫಲ

ಮಕ್ಕಳೇ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ನಮ್ಮಲ್ಲಿ ಬುದ್ಧಿವಂತಿಕೆ ಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇರಲೇಬೇಕು. ಬೇರೆಯವರಿಗೆ ನಾವು ಕೆಲಸ ಮಾಡಿಕೊಡುವಾಗ ಅಥವಾ ಸಹಾಯ ಮಾಡುವಾಗ ಏನೂ ಗೊತ್ತಿಲ್ಲದಂತೆ ಅಥವಾ ಅವಿವೇಕತನದಿಂದ ಕೆಲಸವನ್ನು ಮಾಡಬಾರದು. ಮುದ್ದು ಮಕ್ಕಳೇ ನಿಮಗಾಗಿ ಒಂದು ಪುಟ್ಟ ನೀತಿ ಕತೆಯನ್ನು ಹೇಳಲು ಬಯಸುತ್ತೇನೆ.

ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಪ್ರಾಣಿಗಳೆಂದರೆ ತುಂಬಾ ತುಂಬಾ ಪ್ರೀತಿ. ಅವನು ಎಲ್ಲರಿಗೂ ಸಹಾಯ ಮಾಡುವ ಗುಣದವನಾಗಿದ್ದ.ಆ ಊರಿನವರಿಗೆ ರಾಜನೆಂದರೆ ತುಂಬಾ ಪ್ರೀತಿ. ಅವನ ಮನೆಗೆ ಬಂದವರಿಗೆ ಅವನು ಖಾಲಿ ಕೈಯಲ್ಲಿ ಕಳಿಸಿ ಕೊಡುತ್ತಿರಲಿಲ್ಲ. ಬಂದವರಿಗೆ ಹೊಟ್ಟೆ ತುಂಬಾ ಊಟ, ಬಟ್ಟೆ-ಬರೆಗಳನ್ನು ದಾನ ಕೊಡುತ್ತಿದ್ದ. ಅವನ ಮನೆಯಲ್ಲಿ ನಾಯಿ ಮತ್ತು ಬೆಕ್ಕನ್ನು ಸಾಕುತ್ತಿದ್ದ. ಅವುಗಳ ಜೊತೆಗೆ ಒಂದು ಕೋತಿಯನ್ನು ಸಾಕಿದ್ದನು. ನಾಯಿ ಮತ್ತು ಬೆಕ್ಕಿಗಿಂತ ಅವನಿಗೆ ಕೋತಿಯ ಮೇಲೆ ಬಹಳಷ್ಟು ಪ್ರೀತಿ.ಆ ಕೋತಿಯೂ  ಕೂಡ ಅವನೆಂದರೆ ತುಂಬಾ ಇಷ್ಟ ಪಡುತ್ತಿತ್ತು. ಅವನ ಜೊತೆಯೇ ಇರುತ್ತಿತ್ತು. ಅವನ ಜೊತೆ ಅವನ ಆಪ್ತ ಸೇವಕನಂತೆ ಇರುತ್ತಿತ್ತು. ಹೊರಗಡೆ ವಿಶ್ರಾಂತಿ ತೆಗೆದುಕೊಳ್ಳಲು ಹೊರಟಾಗ ಅವನ ಜೊತೆಯಲ್ಲಿ ಹೋಗುತ್ತಿತ್ತು. ಬೃಂದಾವನದಲ್ಲಿ ತಂಪಾದ ಗಾಳಿ ತೆಗೆದುಕೊಂಡು ಬಹಳ ಆರಾಮ ನಿದ್ದೆ ಮಾಡಿ ಬರುತ್ತಿದ್ದನು. ಯಾವಾಗಲೂ ಒಂದು ಗದೆಯೂ ಅವನ ಬಳಿ ಇರುತ್ತಿತ್ತು. ಅವನಿಗೆ ಕೋತಿ ಎಂದರೆ ತುಂಬಾ ಪ್ರೀತಿ. ಹಾಗೆ ಗದೆಯನ್ನು ಯಾವಾಗಲೂ ಹೊರಗಡೆ ಹೋಗುವಾಗ ತನ್ನ ಬಳಿಯೇ ಕೊಂಡು ಹೋಗುತ್ತಿದ್ದ. ಎಂದಿನಂತೆ ವಿಶ್ರಾಂತಿಗಾಗಿ ಹೊರಗಡೆ ಹೋದನು. ಅಲ್ಲಿ ಬೀಸುವ ತಂಪಾದ ಗಾಳಿಗೆ ರಾಜನಿಗೆ ಹಿತವಾದ ನಿದ್ದೆ ಬಂತು. ಅವನ ಪಕ್ಕದಲ್ಲಿ ಕೋತಿಯು ಕುಳಿತಿತ್ತು. ರಾಜನ ಮೇಲೆ ನೊಣವೊಂದು ಕುಳಿತುಕೊಂಡಿತ್ತು. ಕೋತಿ ಒಂದೆರಡು ಬಾರಿ ಅದನ್ನು ಹೊಡೆದೋಡಿಸಿತು. ಆದರೆ ನೊಣವು ಪುನಃ ಪುನಃ ರಾಜನ ಮೈಮೇಲೆ ಬಂದು ಕೂತುಕೊಳ್ಳಲು ಪ್ರಾರಂಭಿಸಿತು. ಇದನ್ನು ಕಂಡ ಕೋತಿಯು ರಾಜನ ಮೇಲಿರುವ ಅತಿಯಾದ ಮಮತೆಗೆ ತನ್ನ ಒಡೆಯನ ನಿದ್ದೆಯನ್ನು ಹಾಳು ಮಾಡುತ್ತಿದೆಯಲ್ವಾ, ಎಂದು ವಿಪರೀತ ಸಿಟ್ಟು ಬಂದು ಕೋತಿಯ ಕೋಪ ನೆತ್ತಿಗೇರಿತು. ಇದಕ್ಕೆ ಬುದ್ಧಿ ಕಲಿಸಲೇಬೇಕೆಂದು ಆಚೀಚೆ ಹುಡುಕಲು ಆರಂಭಿಸಿತು. ಆವಾಗ ರಾಜನ ಪಕ್ಕದಲ್ಲಿದ್ದ ಗದೆಯು ಕೋತಿಯ ಕಣ್ಣಿಗೆ ಬಿತ್ತು. ಅದನ್ನು ನೋಡಿದ ತಕ್ಷಣ ಕೋತಿಗೆ ಎಲ್ಲಿಲ್ಲದ ಧೈರ್ಯ ಬಂದೇಬಿಟ್ಟಿತು. ಗದೆಯನ್ನು ಎತ್ತಿಕೊಂಡು ಸಾಯಿಸುವ ನಿರ್ಧಾರ ಮಾಡಿತು.

 ನೊಣವು ಹಾರಿ ಬಂದು ರಾಜನ ಮೂಗಿನ ಮೇಲೆ ಕುಳಿತುಕೊಂಡಾಗ ಕೋತಿ ಸಿಟ್ಟಿನಿಂದ "ನಿನಗೆ ನನ್ನ ಭಯವಿಲ್ಲವೇ? ನಿನ್ನ ಹಠವೇ ನಿನಗೆ ಮೇಲಾದರೆ ಈಗೋ ನನ್ನ ಶಕ್ತಿ ಏನೆಂದು ನೋಡು"ಇಂದು ಗದೆಯನ್ನು ಎತ್ತಿ ಅದರ ಮೇಲೆ ಬೀಸಿತು.ಆ ಗದೆಯ ಹೊಡೆತಕ್ಕೆ ರಾಜನ ತಲೆ ಜಜ್ಜಿ ಹೋಯಿತು. ನೊಣವು ತಪ್ಪಿಸಿ ಹಾರಿತು. ಅತೀ ಬುದ್ಧಿವಂತಿಕೆ ಹಾಗೂ ಕರ್ತವ್ಯನಿಷ್ಠೆಯಿಂದ ಮಾಡಿದ ಕೆಲಸದ ಅವಿವೇಕತನದಿಂದ ಕೋತಿ ತನ್ನ ಒಡೆಯನ ಜೀವವನ್ನೇ ಬಲಿ ತೆಗೆದುಕೊಂಡಿತು. ತಿಳಿಯಿತಾ ಮಕ್ಕಳೇ ನಾವು ಎಷ್ಟೇ ಬುದ್ಧಿವಂತರಾದರೂ ಕೆಲವೊಮ್ಮೆ ನಾವು ಇನ್ನೊಬ್ಬರ ಮೇಲೆ ಇಟ್ಟಿರುವ ಪ್ರೀತಿ ನಂಬಿಕೆ ಕಾರ್ಯತತ್ಪರ್ಯತೆಯ ಫಲವಾಗಿ ನಮ್ಮನ್ನೇ ನಾವು ಹುಂಬತನರನ್ನಾಗಿ ಅಥವಾ ಅವಿವೇಕಿಗಳನ್ನಾಗಿ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಪರಾಮರ್ಶಿಸಿ ಕೆಲಸವನ್ನು ಮಾಡಬೇಕು ಇಲ್ಲದಿದ್ದರೆ ಕೋತಿಯಂತ ಪರಿಸ್ಥಿತಿಯು ನಮಗೂ ಬಂದೇ ಬರುತ್ತದೆ. ಈ ನೀತಿ ಕತೆಯಿಂದ ವಿವೇಚನೆ ಇಲ್ಲದೆ ಮಾಡುವ ಕೆಲಸಕ್ಕೆ ಯಾವತ್ತು ಜಯ ಸಿಗುವುದಿಲ್ಲ. ಜೀವನದಲ್ಲಿ ಯಾವತ್ತೂ ಹುಂಬತನ ಒಳ್ಳೆಯದಲ್ಲ. ಎಂಬುದು ಮನದಟ್ಟಾಯಿತು.

ಮಕ್ಕಳೇ ಎಲ್ಲಾ ಗೊತ್ತಿದ್ದೂ ಅವಿವೇಕದಿಂದ ವರ್ತಿಸದಿರಿ.ಜೀವನದಲ್ಲಿ ಸಮಸ್ಯೆಗಳ ಪರಿಹಾರಿಸಿಕೊಳ್ಳಿರಿ ಹೊರತು ನಿಮ್ಮಿಂದ ಬೇರೆಯವರಿಗೆ ಸಮಸ್ಯೆ ಆಗದಿರಲಿ ಮಕ್ಕಳೇ ಇಲ್ಲಿಗೆ ನೀತಿ ಕತೆಯನ್ನು ಮುಗಿಸುತ್ತೇನೆ.


ಸವಿತಾ ಸತೀಶ್ ಶೆಟ್ಟಿ ಗೃಹಿಣಿ (ಬೆಳ್ತಂಗಡಿ)


 (೨)

ಹಿರಿಯರ ಮಾತಲ್ಲಿ ಗೌರವವಿರಲಿ

ಮಕ್ಕಳೇ, ಹುಂಬತನ ಅಂದರೆ ಕೆಟ್ಟ ಧೈರ್ಯ. ನಿಮ್ಮಲ್ಲಿ ಕೆಲವರು ಆಳದ ನೀರಲ್ಲಿ ಈಜಬೇಡಿ, ಅಪಾಯ ಇದೆ ಎಂಬ ಹಿರಿಯರ ಮಾತು ಕೇಳದೇ,ಈಜಲು ಹೋಗಿ ಅಪಾಯಕ್ಕೆ ಸಿಲುಕುತ್ತೀರಿ ನೋಡಿ. ಜೀವನದಲ್ಲಿ ಯಾವ ಕೆಲಸಕ್ಕೂ ಹುಂಬತನ ಮಾಡಲೇ ಬಾರದು. ಒಳ್ಳೆಯ ರೀತಿಯ ಜೀವನ ನಡೆಸಲು ಎಚ್ಚರಿಕೆಯ ಮಾರ್ಗ ಅನುಸರಿಸಬೇಕು. ಇದಕ್ಕಾಗಿ ಒಂದು ಕತೆ ಹೇಳುವೆ ಕೇಳಿ ಮಕ್ಕಳೇ.

ಸಿರಿಯೂರು ಒಂದು ಸುಂದರವಾದ ಹಳ್ಳಿ. ಅಲ್ಲಿ ಶಂಕರ ಮತ್ತು ಸೀತಾ ದಂಪತಿಗಳು, ರಘು ಮತ್ತು ರಾಜು ಎಂಬ ಎರಡು ಮಕ್ಕಳೊಡನೆ ವಾಸವಾಗಿದ್ದರು. ಇದ್ದ ಸ್ವಲ್ಪ ಹೊಲದಲ್ಲಿ ಬೇಸಾಯ ಮಾಡುತ್ತಾ, ಜೀವನ ಮಾಡುತ್ತಿದ್ದರು. ರಘುಗೆ ಹಿರಿಯರಲ್ಲಿ ಬಹಳ ಭಯಭಕ್ತಿ. ದಿನಾ ಸೂರ್ಯ ಹುಟ್ಟುವ ಮೊದಲೇ ಏಳುತ್ತಿದ್ದ. ಶಾಲೆಯಲ್ಲಿ ಗುರುಗಳು ಆ ದಿನ ಕಲಿಸಿದ ಪಾಠಗಳನ್ನು ಅದೇ ದಿನ ಓದಿ, ಬರೆದು ಕಲಿತು ಬಿಡುತ್ತಿದ್ದ. ಅಪ್ಪನಿಗೂ, ಅಮ್ಮನಿಗೂ  ಬಿಡುವಿನ ವೇಳೆಯಲ್ಲಿ ಕೆಲಸದಲ್ಲೂ ಕೈಲಾದ ಸಹಾಯ ಮಾಡುತ್ತಿದ್ದ. ಅಕ್ಕ ಪಕ್ಕದಲ್ಲೆಲ್ಲ ರಘು ತುಂಬಾ ಒಳ್ಳೆಯ ಹುಡುಗನೆಂದೇ ಚಿರಪರಿಚಿತನಾಗಿದ್ದ. ರಾಜು ತದ್ವಿರುದ್ಧ. ದಿನಾ ಬೆಳಿಗ್ಗೆ ಅವನು ಸೂರ್ಯ ಬಂದ ಮೇಲೆ ಏಳುತ್ತಿದ್ದ. ಓದು ಬರಹದಲ್ಲೂ ಹಿಂದು. ಹೇಳಿದ ಮಾತು ಕೇಳುತ್ತಿರಲಿಲ್ಲ. ಗುರು ಹಿರಿಯರಲ್ಲೂ ಗೌರವವಿಲ್ಲ. ಕೆಟ್ಟ ಹುಂಬ ಬೇರೆ. ಯಾರು ಏನೇ ಹೇಳಿದರೂ ಅವನು ಕೇಳುತ್ತಿರಲಿಲ್ಲ. ನಂಬುತ್ತಿರಲಿಲ್ಲ.  ಎಲ್ಲವನ್ನು ತಾನೇ ಪರೀಕ್ಷಿಸಲು ಹೋಗುತ್ತಿದ್ದ. ಒಮ್ಮೆ ಏನಾಯಿತು ಅಂದರೆ , ಯಾರೋ ಆಗಸ ತಾನು ಸಾಕಿದ ಕತ್ತೆಯಿಂದ ಸರಿಯಾಗಿ ಕೆಲಸ ತೆಗೆದುಕೊಂಡು, ಮುದಿಯಾಯಿತೆಂದು ಹೊಡೆದು ಹೊರ ಹಾಕಿದ್ದ. ಆ ಕತ್ತೆ. ತಿರುಗಾಡುತ್ತ ಆಹಾರ ಅರಸಿ, ಸಿರಿಯೂರಿಗೆ ಬಂತು. ರಾಜುಗೆ ಇದನ್ನು ನೋಡಿ ತಮಾಷೆಯಾಗಿ ಕಂಡಿತೇನೋ ? ಕತ್ತೆಯ ಹಿಂದಿಂದೆ ಓಡಾಡ ತೊಡಗಿದ. ಹಿರಿಯರೆಲ್ಲ "ಏ ರಾಜು, ಕತ್ತೆ ಹಿಂದೆ ಹೋಗಬೇಡೋ. ಹಿಂದೆ ಹೋದರೆ ಕತ್ತೆ ಒದೆಯುತ್ತದೆ. ಹೋಗಬೇಡಪ್ಪಾ " ಅಂತ ಬುದ್ಧಿ ಹೇಳಿದರು. ರಾಜು ಮಾತು ಕೇಳೋ ಹುಡುಗನಾ ? ಮುದ್ದಾಮ್ ಕತ್ತೆ ಹಿಂದೆ ಹೋದ. ಕತ್ತೆ ತನ್ನ ಗುಣ ತೋರಿಸಿಯೇ ಬಿಟ್ಟಿತು. ಹಿಂದಿನ ಕಾಲೆತ್ತಿ ಬಲವಾಗಿ ರಾಜುನ ಮುಖಕ್ಕೆ ಒದೆಯಿತು. ಆ ಹೊಡೆತಕ್ಕೆ ರಾಜು  ನಾಲ್ಕು ಮಾರು ಹಿಂದೆ ಹೋಗಿ ಬಿದ್ದ.  ಮುಖಕ್ಕೆ ಏಟು ಬಿದ್ದು , ಆಗಲೇ ಎರಡು ಹಲ್ಲು ಬಿದ್ದು ಹೊಯ್ತು. ಬಾಯಿಂದ ರಕ್ತ ಬಳಬಳನೆ ಸುರಿಯಲಾರಂಭಿಸಿತು. ರಾಜು ಬಿದ್ದಿದ್ದು ಹುಲ್ಲಿನ ಮೂಟೆ ಮೇಲೆ. ಆದ್ದರಿಂದ, ತಲೆಗೆ  ಏಟುಬಿದ್ದು ಆಗುವ ದೊಡ್ಡ ಅನಾಹುತ ತಪ್ಪಿತು. ಎಲ್ಲರೂ ಓಡೋಡಿ ಬಂದು ರಾಜುವನ್ನು ಎತ್ತಿದರು. 

ಅಪ್ಪ, ಅಮ್ಮ ಓಡಿಬಂದು ಅಲ್ಲಿಯೇ ಹತ್ತಿರದಲ್ಲಿ ಇದ್ದ ಆಸ್ಪತ್ರೆಗೆ ಕರೆದೊಯ್ದರು. ರಾಜು ಈ ಹಿಂದೆಯೂ ತನ್ನ ಹುಂಬತನದಿಂದ ಸಾಕಷ್ಟು ನೋವು ತಿಂದಿದ್ದ. ಆದರೆ ಈ ಬಾರಿ ಹಲ್ಲು ಮುರಿಸಿಕೊಂಡು ಸರಿಯಾಗಿ  ಬುದ್ಧಿ ಕಲಿತ. ಅಕಸ್ಮಾತ್ ರಾಜು ಬಿದ್ದಲ್ಲಿ ಹುಲ್ಲಿನ ಮೂಟೆ ಇಲ್ಲವಾಗಿದ್ದರೆ, ರಾಜು ಬದುಕಿರುತ್ತಿರಲಿಲ್ಲ ಅಲ್ಲವೇ ?

ನೋಡಿದ್ರಾ ಮಕ್ಕಳೇ, ದೊಡ್ಡವರು ಹೇಳುವ ಅನುಭವದ ನುಡಿಗಳನ್ನು ಕೇಳಿದರೆ, ಯಾವ ಆಪತ್ತು ಬರುವದಿಲ್ಲ. ನೀವೆಲ್ಲಾ ಹಿರಿಯರು ಹೇಳುವ, ನೀತಿಮಾತುಗಳನ್ನು ಕೇಳಿ, ಅನುಸರಿಸಿ, ಜಾಣರಾಗಿ ಬಾಳಿರಿ.


ತಾತ್ಪರ್ಯ-  ಹುಂಬತನ ಪ್ರಾಣಕ್ಕೆ ತರುವುದು ಕುತ್ತು.

ಶ್ರೀಮತಿ ವಿಜಯಾ ಜಿ ಶೆಟ್ಟಿ

ಸಿರ್ಸಿ (ಉತ್ತರ ಕನ್ನಡ )


(೩)

ಶೀರ್ಷಿಕೆ-ಹುಂಬತನ ತರವಲ್ಲ

ಕವಿತಾ ರವಿ ದಂಪತಿಗಳಿಗೆ ಬಹಳ ದಿನಗಳ ಮೇಲೆ ಮಕ್ಕಳಾಯಿತು. ಒಂದು ಗಂಡು ಒಂದು ಹೆಣ್ಣು. ಇಬ್ಬರನ್ನು ಮುದ್ದಿನಿಂದ ಬೆಳೆಸಿದ್ದರು. ಮಗಳು ದೀಪು ಸೌಮ್ಯ ವಾಗಿಯೇ ಇದ್ದಳು. ಮಗ ಭಾಸ್ಕರನು ಬಹಳ ಹುಂಬುತನವನ್ನು ಮಾಡುತ್ತಿದ್ದನು. ಸ್ವಲ್ಪ ಹೆಚ್ಚಾಗಿಯೇ ಭಾಸ್ಕರ ನನ್ನು ಗಂಡುಮಗು ಎಂದು ಪ್ರೀತಿಸಿದ್ದರು ಇದಕ್ಕೆ ಕಾರಣವಿರಬಹುದು. ಮನೆಯಲ್ಲಿ ತಂಟೆ ಮಾಡಿದಲ್ಲದೇ ಶಾಲೆಯಲ್ಲೂ ಸಹ ಬಹಳಷ್ಟು ಗಲಾಟೆ ಮಾಡುತ್ತಿದ್ದಾನು. ಶಾಲೆಯಿಂದ ದಿನವೂ ಅಧ್ಯಾಪಕರಿಂದ ದೂರು ಬರುತ್ತಿತ್ತು. ಮನೆಗೆ ಬಂದ ನಂತರ ಇದೇ ತುಂಟುತನ ಅಕ್ಕಪಕ್ಕದ ಮನೆಯವರಿಂದ ದೂರ ಬರುತ್ತಿತ್ತು.

ಒಂದುದಿನ ಪಕ್ಕದ ಮನೆಯ ಕಿಟಕಿಗೆ ಕಲ್ಲು ಎಸೆದು ಕಿಟಕಿಯ ಗಾಜನ್ನು ಮುರಿದಿದ್ದನು. ಪಕ್ಕದ ಮನೆಯವರು ಬಂದು ರವಿಯೊಂದಿಗೆ ಜಗಳ ಆಡಿ ಅದರ ರಿಪೇರಿಗೆ ಹಣವನ್ನು ತೆಗೆದುಕೊಂಡು ಹೋದರು. ಇದನ್ನೆಲ್ಲಾ ಗಮನಿಸಿದರು ಭಾಸ್ಕರನು ತನ್ನ ತುಂಟಾಟವನ್ನು ಮಾತ್ರ ಬಿಡಲಿಲ್ಲ. ಮತ್ತೊಂದು ದಿನ ಸ್ನೇಹಿತರೊಂದಿಗೆ ಸೇರಿ ಒಬ್ಬರ ಮನೆಯಲ್ಲಿ ಹಣ್ಣು ಹೂಗಳನ್ನು ಕಿತ್ತು ಗಿಡದಿಂದ ಎಲ್ಲವನ್ನು ಹಾಳು ಮಾಡಿದನು. ಅವರಿಂದಲೂ ರವಿಗೆ ದೂರು ಬಂದಿತ್ತು. ಇದರಿಂದ ದಂಪತಿಗಳಿಬ್ಬರಿಗೂ ಭಾಸ್ಕರನ ಮೇಲೆ ಚಿಂತೆ ಮೂಡಿತ್ತು. ತಂದೆ ತಾಯಿಯ ಮಾತಿಗೆ ಬೆಲೆಕೊಡದೆ ಹೋಗಿದ್ದನ್ನು ಭಾಸ್ಕರ.

ಭಾಸ್ಕರನಿಗೆ ತನ್ನ ಅಪ್ಪನ ಕಾರು ಎಂದರೆ ತುಂಬಾ ಪ್ರೀತಿಯಿತ್ತು. ಒಂದು ದಿನ ರವಿಯ ಮನೆಗೆ ಬಂಧು ಗಳು ಬಂದಿದ್ದರು. ಆಗಷ್ಟೇ ಬಂದ ರವಿಯು ಕಾರಿನ ಕೀಯನ್ನು ಅವರೊಂದಿಗೆ ಮಾತನಾಡುತ್ತ ಟಿಪಾಯಿ ಯು ಮೇಲೆ ಇಟ್ಟು ಮಾತಿಗೆ ಕುಳಿತಿದ್ದನು. ಅಷ್ಟರಲ್ಲಿ ಭಾಸ್ಕರನು ಒಳಗಿನಿಂದ ಬಂದು ಮೆಲ್ಲಗೆ  ಕಾರಿನ ಕೀಯನ್ನು ತೆಗೆದುಕೊಂಡು ಕಾರಿನತ್ತ ಹೊರಗೆ ಓಡಿದನು. ಮಾತಿನ ಭರದಲ್ಲಿ ಯಾರು ಇದನ್ನು ಗಮನಿಸಲಿಲ್ಲ. ಕಾರನ್ನು ಸ್ಟಾರ್ಟ್ ಮಾಡಿದನು. ಅವನಿಗೆ ಸರಿಯಾಗಿ ಕಾರು ನಡೆಸಲು ಬರುತ್ತಿರಲಿಲ್ಲ. ಇದನ್ನು ಮನೆಯಲ್ಲಿ ಯಾರೂ ಗಮನಿಸಿರಲಿಲ್ಲ. ಸ್ವಲ್ಪ ದೂರ ಹೋದಮೇಲೆ ಒಂದು ಮರಕ್ಕೆ ಡಿಕ್ಕಿ ಹೊಡೆದನು. ಕಾರಿನ ಮುಂದಿನ ಭಾಗ ಜಕ್ಕಂ ಆಗಿತ್ತು. ಅವನು ಪ್ರಜ್ಞೆತಪ್ಪಿ ಕಾರಿನಲ್ಲಿ ಬಿದ್ದುಬಿಟ್ಟಿದ್ದನು. ಪಕ್ಕದಲ್ಲೇ ಇದ್ದ ಕೆಲವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಸೇರಿಸಿದರು. ನಂತರ ರವಿಯ ನಂಬರ್ ಅನ್ನು ಹುಡುಕಿ ನಡೆದ ವಿಷಯವನ್ನು ಫೋನಿನಲ್ಲಿ ಹೇಳಿದರು. ಎಲ್ಲರೂ ಆಸ್ಪತ್ರೆಯತ್ತ ಓಡಿದರು. ಆತನ ಹುಂಬತನಕ್ಕೆ ತಾವೇ ಕಾರಣ ಎಂಬುದು ತಂದೆ ತಾಯಿ ಅನಿಸಿತು. ಮಾರನೇ ದಿನ ಭಾಸ್ಕರನಿಗೆ ಎಚ್ಚರ ಬಂದಾಗ ತನ್ನ ತಪ್ಪಿನ ಅರಿವು ಆತನಿಗೆ ಆಯಿತು. ತನ್ನ ನೆಚ್ಚಿನ ಕಾರು ಸ್ಥಿತಿ ನೋಡಿ ಮನ ನೊಂದುಕೊಂಡನು.

ನೋಡಿ ಮಕ್ಕಳೆ ನಮ್ಮ ಹುಂಬತನದಿಂದ ಎಷ್ಟೊಂದು ನಷ್ಟಗಳು ಉಂಟಾಗುತ್ತದೆ ಎಂದು. ಮಕ್ಕಳು ಮಕ್ಕಳ ತರ ಇದ್ದರೆ ಚೆನ್ನ. ಅಲ್ಲವೇ ?


ಕೆ. ಆರ್ .ಉಷಾ ದಿದ್ದಿಗಿ, ಹೈದರಾಬಾದ್.


(೪)

ಶೀರ್ಷಿಕೆ: ಹುಂಬತನದ ಅವಾಂತರ


ಹಿಂದೆ ವಿದರ್ಭ ದೇಶವನ್ನು ಮಧುವರ್ಮ ಎಂಬ ರಾಜನು  ರಾಜ್ಯಭಾರ ಮಾಡುತ್ತಿದ್ದ.ತನ್ನ ಪ್ರಜೆಗಳನ್ನು ಮಕ್ಕಳಂತೆಯೇ‌ ನೋಡಿಕೊಳ್ಳುತ್ತಿದ್ದ."ಯಥಾ ರಾಜಾ ತಥಾ ಪ್ರಜಾ " ಅಂದರೆ ಹೇಗೆ ರಾಜನೋ,ಹಾಗೆಯೇ‌ ಪ್ರಜೆಗಳಿದ್ದರು.ರಾಜನಿಗೆ ಇಂದುಲೇಖಾ ಅಂತ ಒಬ್ಬಳು ಮುದ್ದಾದ ರಾಜಕುಮಾರಿಯಿದ್ದಳು.ಅವಳಿಗೆ ಮದುವೆ ಮಾಡುವ ವಯಸ್ಸಾಗಿತ್ತು.ರಾಜನಿಗೂ ಪ್ರಾಯವಾಗುತ್ತಾ ಬಂದಿತ್ತು.ಮಗಳಿಗೆ ಸೂಕ್ತನಾದ ವರನನ್ನು ಹುಡುಕಿ  ಆದಷ್ಟು ಬೇಗ ಮಗಳಿಗೆ ಮದುವೆ ಮಾಡಿ ರಾಜ್ಯಭಾರವನ್ನು ಅಳಿಯನಿಗೆ ಬಿಟ್ಟು ಕೊಡಬೇಕು ಅಂತ ಯೋಚಿಸಿದ. ಹಾಗೆ ನಾಲ್ಕೂ ದಿಕ್ಕುಗಳಲ್ಲಿ ವರಾನ್ವೇಷಣೆಗೆ‌ ತೊಡಗಿದ.ಮತ್ತೆ "ನನ್ನ ಮಗಳನ್ನು ವರಿಸಲು ಬಂದ ರಾಜಕುಮಾರರು ನಾನು ಹೇಳಿದ ಷರತ್ತಿಗೆ ಬದ್ಧರಾಗಿರಬೇಕು.ನಾನು ಮಾಡುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನನ್ನ ಮಗಳು ಇಂದುಲೇಖಾಳನ್ನು ಕೊಟ್ಟು ಮದುವೆ ಮಾಡುವೆನಲ್ಲದೆ ನನ್ನ ಇಡೀ ರಾಜ್ಯವನ್ನು ಅವನಿಗೆ ವಹಿಸುವೆ" ಎಂದು ಸುತ್ತೋಲೆಯನ್ನು ಹೊರಡಿಸಿದ. ಒಂದು ನಿರ್ದಿಷ್ಟ ದಿನವನ್ನು ನಿರ್ಧಾರ ಮಾಡಿ "ಮದುವೆ ಆಗಬಯಸುವ ಎಲ್ಲಾ ರಾಜಕುಮಾರರು ಬಂದು ನನ್ನನ್ನು ಭೇಟಿಯಾಗಿ" ಎಂದ. ಆ ದಿನ  ಸುತ್ತ ಮುತ್ತ ಎಲ್ಲಾ ದೇಶದ ಯುವ ರಾಜಕುಮಾರರು ವಿದರ್ಭ ದೇಶಕ್ಕೆ ಬಂದು ಸರದಿಯ ಸಾಲಿನಲ್ಲಿ ನಿಂತರು.

ಮಧುವರ್ಮ ರಾಜನು ಒಬ್ಬೊಬ್ಬರನ್ನೇ  ಒಳಗೆ ಕರೆಸಿ ಅನೇಕ ಪ್ರಶ್ನೆಗಳನ್ನು ಕೇಳಿದನು.ಅವರೆಲ್ಲಾ ಅವರಿಗೆ ‌ತಿಳಿದಂತೆ ಉತ್ತರಿಸಿದರು.ಕೆಲವರಂತೂ ಉದ್ಧಟತನವನ್ನು ತೋರಿದರು. ರಾಜನು ಎಲ್ಲರನ್ನೂ ವಿಚಾರಿಸಿ ಆದ ಮೇಲೆ ಅವರಲ್ಲಿ ಮೂವರು ರಾಜಕುಮಾರರನ್ನು ಆಯ್ಕೆ ಮಾಡಿದನು. ಅವರೇ ಸುಭದ್ರ ದೇಶದ ನಂದವರ್ಮ,ಮದ್ರ ದೇಶದ ಮಾಧವವರ್ಮ ಮತ್ತೆ ಸಾರಂಗ ದೇಶದ  ಶುಭವರ್ಮ. ಆಯ್ಕೆ ಮಾಡಿದ ಈ ಮೂವರನ್ನು ಪುನಃ ಒಂದು ದಿನ  ತನ್ನ ದೇಶಕ್ಕೆ ಕರೆಯಿಸಿಕೊಂಡ  ಮಧುವರ್ಮ ರಾಜ. ಧುವರ್ಮ ರಾಜನು ಆ ಮೂವರು ರಾಜಕುಮಾರರಿಗೂ ಒಂದೊಂದು ಕೋಣೆಯನ್ನು ಕೊಟ್ಟು "ಈ ಕೋಣೆಯನ್ನು ಹೇಗಾದರೂ ಯಾವ ವಸ್ತುವಿನಿಂದ ಆದರೂ ಸರಿ ಭರ್ತಿ ಮಾಡಬೇಕು ಎಂದ.ಇದಕ್ಕೆ ಕಾಲಾವಧಿ ಅರ್ಧ ಗಂಟೆ ಮಾತ್ರ.ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನನ್ನ ಮಗಳು ಇಂದುಲೇಖಾ ಮತ್ತು ನನ್ನ ವಿದರ್ಭ ದೇಶವನ್ನೂ  ಕೊಡುವೆ" ಎಂದು ವಾಗ್ದಾನವಿತ್ತನು. ಸುಭದ್ರ ದೇಶದ ರಾಜಕುಮಾರ ,ನಂದವರ್ಮನು ಹಗುರವಾದ ಹತ್ತಿಯನ್ನು ಹೊತ್ತು ‌ತರಲು ಸುಲಭ.ಅದನ್ನೇ‌ ತಂದು ಕೋಣೆಯನ್ನು ಭರ್ತಿ ಮಾಡಬೇಕು ಅಂತ  ಬೇಗ  ಹೋಗಿ ಹತ್ತಿಯನ್ನು ಮಾರುವವನ ಬಳಿ ಹೋಗಿ ಹತ್ತಿ ಗೋಣಿಗಳನ್ನು ಖರೀದಿಸಿ  ತನ್ನ ಕೋಣೆಗೆ ಬಂದು ಸುರುವಿದ.ಅರ್ಧಗಂಟೆ ಆಗುವಾಗ ಮಧುವರ್ಮ ರಾಜನ ಭಂಟನು ಆ ಕೋಣೆಗೆ ಬೀಗ ಹಾಕಿದ.

ಮದ್ರ ದೇಶದ ಮಾಧವ ವರ್ಮ ರಾಜಕುಮಾರನು ಬೇಗ  ಹೋಗಿ ಸುಲಭವಾಗಿ ಸಿಗುವ ಕಟ್ಟಿಗೆಗಳನ್ನು ‌ತಂದು ತನ್ನ ಕೋಣೆಗೆ ತುಂಬಿಸಿದ.ಅರ್ಧ ಗಂಟೆ  ಆದಾಗ ಆ ಭಂಟನು ಅವನ ಕೋಣೆಗೆ ಬೀಗ ಹಾಕಿದ.ಸಾರಂಗ ದೇಶದ ರಾಜಕುಮಾರ ಶುಭವರ್ಮನು ಏನು ಮಾಡಿದೆನೋ ಗೊತ್ತಿಲ್ಲ.ಭಂಟನ ಬಳಿ ಬಂದು ನನ್ನ ಕೋಣೆಗೆ ಬೀಗ ಹಾಕಬಹುದು ಎಂದ.ಅವನು ಬೀಗ ಹಾಕಿದ. ರಾಜ ಮಧುವರ್ಮನು ನಂದವರ್ಮನ ಕೋಣೆಯ ಬೀಗ ತೆರೆಸಿದ.ಹತ್ತಿ ತುಂಬಿತ್ತು. ಆದರೆ ಇನ್ನಷ್ಟು ಹತ್ತಿ ತುಂಬಲು ಜಾಗ ಉಳಿದಿತ್ತು. ಮತ್ತೆ ಮಾಧವ ವರ್ಮ ರಾಜಕುಮಾರನ ಕೋಣೆ ಬೀಗ ತೆರೆಸಿ ನೋಡಿದ.ಅಲ್ಲಿ ಕಟ್ಟಿಗೆಯ ರಾಶಿ ತುಂಬಿತ್ತು.ಆದರೆ ಇನ್ನಷ್ಟು ಕಟ್ಟಿಗೆ ತುಂಬಿಸಲು ಸ್ಥಳವಿತ್ತು. ಕೊನೆಗೆ ಶುಭವರ್ಮನ ಕೋಣೆಯ ಬೀಗ ತೆರೆಸಿ ನೋಡಿದಾಗ ಅಲ್ಲಿ ದೀಪ ಒಂದು ಪ್ರಕಾಶಮಾನವಾಗಿ ಉರಿಯುತ್ತಿತ್ತು.ಕೋಣೆಯ ತುಂಬಾ ಬೆಳಕು ತುಂಬಿತ್ತು. ರಾಜ ಮಧುವರ್ಮನು ಶುಭವರ್ಮನ ಜಾಣತನವನ್ನು ಮೆಚ್ಚಿ ತನ್ನ ಮಗಳು ಇಂದುಲೇಖಾಳನ್ನು ಶುಭವರ್ಮನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿ ಅವನಿಗೆ ಪಟ್ಟಾಭಿಷೇಕವನ್ನೂ ಮಾಡಿದನು. ಕ್ಕಳೇ... ಹುಂಬತನ ಒಳ್ಳೆಯದಲ್ಲ. ಜಾಣ್ಮೆಯಿಂದ ಸವಾಲನ್ನು ಗೆಲ್ಲಬೇಕು. ಏನೂ ಕಷ್ಟ  ಪಡದೆ ದೀಪ ಉರಿಸಿ ಬೆಳಕನ್ನು ಇಡೀ ಕೋಣೆಗೆ ತುಂಬಿಸಿದ ಶುಭವರ್ಮನಂತೆ ನೀವು ಜಾಣರಾಗಬೇಕು.

ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ 

(೫)

ಶೀರ್ಷಿಕೆ:-ಅಹಂಕಾರಕ್ಕೆ ಮದ್ದಿಲ್ಲ


ಮಕ್ಕಳೇ, ನೀವು ಹಿರಿಯರು ಹೇಳಿದ ಹಾಗೆ ಕೇಳಬೇಕು, ಹಿರಿಯರಿಗೆ ಗೌರವ ಕೊಡಬೇಕು ಮತ್ತು ಅಶಕ್ರರಿಗೆ ಸಹಾಯ ಮಾಡಬೇಕು. ತಮ್ಮಲ್ಲಿ ಬುದ್ದಿವಂತಿಕೆ ಇದೆ ಎಂದು ಅಹಂಕಾರ ಮಾಡಿದರೆ ಅದು ನಿಮ್ಮ ಮೂರ್ಖತನವಾಗಬಹುದು.ಅದು ಹೇಗೆ ಎಂಬುದನ್ನು ಈ ಕಥೆಯ ಮೂಲಕ ತಿಳಿಯೋಣ.

ಒಂದು ಊರಿನಲ್ಲಿ ಸದಾನಂದ ಮತ್ತು ಸುಕನ್ಯಾ ದಂಪತಿಗಳು ಇದ್ದರು.ಅವರಿಗೆ ಮದುವೆಯಾಗಿ ಆರು ವರ್ಷದ ನಂತರ ಒಬ್ಬ ಮಗನು ಹುಟ್ಟಿದ. ಅವನಿಗೆ ಸನತ್ ಎಂದು ನಾಮಕರಣ ಮಾಡಿದರು. ತಂದೆ -ತಾಯಿ ಮಗುವನ್ನು ಅತೀ ಪ್ರೀತಿಯಿಂದ ಸಾಕುತ್ತಿದ್ದರು. ತಾಯಿಯ ಪ್ರೀತಿ ಸುಖವಾದದ್ದು, ತಂದೆ ಪ್ರೀತಿ ಮಧುರವಾದದ್ದು ಎನ್ನುವಂತೆ. ಮಗುವನ್ನು ನೆಲದಲ್ಲಿ  ಇಟ್ಟರೆ ಇರುವೆ ಕೊಂಡೊಯ್ಯಾ ಬಹುದು,ಎತ್ತಿಕೊಂಡರೆ ಗಿಡುಗ ಕೊಂಡೊಯ್ಯಬಹುದು ಎಂಬಂತೆ 

ನೋಡಿಕೊಳ್ಳುತ್ತಿದ್ದರು.

ಹೀಗೆ ಸನತ್ ಬೆಳೆದು ದೊಡ್ಡವನಾಗುತ್ತಾ ಬಂದ.ತಂದೆ-ತಾಯಿಯರ ಅತಿಯಾದ ಪ್ರೀತಿಯಿಂದ ಅವನಲ್ಲಿ ಹಠಮಾರಿತನವೂ ಬೆಳೆಯಿತು. ತಾನು ನೋಡಿದ್ದನ್ನು, ಕೇಳಿದ್ದನ್ನು ಕೊಡಿಸುವಂತೆ ರಚ್ಚೆ ಹಿಡಿಯುತ್ತಿದ್ದ. ಪಕ್ಕದ ಮನೆಯವರಿಗೆ ತುಂಬಾ ಕೀಟಲೆ ಕೊಡುತ್ತಿದ್ದ. ಅವನನ್ನು ಮನೆಯ ಹತ್ತಿರದಲ್ಲಿ ಇರುವ ಶಾಲೆಗೆ ಸೇರಿಸಿದರು. ಸುಕನ್ಯಾಳು ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದಳು.ಆದರೆ ತಾಯಿಯನ್ನು ಬಿಟ್ಟು ಅವನು ಅಲ್ಲಿರಲು ಕೇಳುತ್ತಿರಲಿಲ್ಲ.ಹಾಗಾಗಿ ತರಗತಿ ಮುಗಿಯುವವರೆಗೂ ತಾಯಿ ಅಲ್ಲಿಯೇ ಇರಬೇಕು ಎಂದು ಹಠ ಹಿಡಿಯುತ್ತಿದ್ದ. ತನ್ನ ತರಗತಿಯ ಮಕ್ಕಳಿಗೆಲ್ಲಾ ಕೀಟಲೆ ಮಾಡುತ್ತಿದ್ದ. ಇದರಿಂದ ಟೀಚರ್ ರೋಸಿ ಹೋಗುತ್ತಿದ್ದರು. ಅವನ ತಂದೆಯನ್ನು ಕರೆದು,ಅವನನ್ನು ಬೇರೆ ಶಾಲೆಗೆ ಕಳಿಸುವಂತೆ ಹೇಳಿದರು.ಅವರಿಬ್ಬರಿಗೂ ಮಗನ ಬಗ್ಗೆ ತುಂಬಾ ಬೇಸರವಾಯಿತು. ನಮ್ಮ ಅತಿಯಾದ ಪ್ರೀತಿಯಿಂದ ನಮ್ಮ ಮಗನಿಗೆ ಈ ರೀತಿಯಾಗಿ ಬೆಳೆದ ಎಂದು ಪಶ್ಚಾತ್ತಾಪ ಪಟ್ಟರು.


ಸನತ್ ಯಾವ ಚಿಂತೆಯಿಲ್ಲದೆ ಬೆಳೆಯತೊಡಗಿದ.ಮಗನಿಗೆ ಅಪ್ಪ-ಅಮ್ಮ ಆ ಊರು ಬಿಟ್ಟು ಬೇರೆ ಊರಿಗೆ ಹೋಗುತ್ತಾರೆ. ಮಗನಿಗೆ ತುಂಬಾ ಬುದ್ದಿ ಹೇಳುತ್ತಾರೆ. ಅಲ್ಲಿ ಅವನನ್ನು ಒಂದು ಒಳ್ಳೆಯ ಶಾಲೆಗೆ ಸೇರಿಸುತ್ತಾರೆ. ಸ್ವಲ್ಪ ಹಠ ಕಡಿಮೆ ಆದರೂ, ಒಮ್ಮೊಮ್ಮೆ ಹುಂಬನಂತೆ ವರ್ತಿಸುತ್ತಿದ್ದ.ಹೈಸ್ಕೂಲ್ ಸೇರಿದ ಸನತ್ ತಾನೊಬ್ಬ ಕಾಲೇಜ್ ಹುಡುಗನಂತೆ ವರ್ತಿಸುತ್ತಿದ್ದ. ಒಮ್ಮೆ ತರಗತಿಯಲ್ಲಿ ವಿಜ್ಞಾನ ಕ್ಲಾಸ್ ನಡೆಯುತ್ತಿತ್ತು. ವಿಜ್ಞಾನದ ಅಧ್ಯಾಪಕರು ಪ್ರಯೋಗ ಮಾಡುತ್ತಿದ್ದರು. ಅಧ್ಯಾಪಕರು ಒಂದು ಪ್ರಯೋಗ ಮಾಡಿ ಮಕ್ಕಳಿಗೆ ತೋರಿಸಿದರು. ಸೋಡಿಯಂ ಮೆಟಲ್ ನೀರಿನಲ್ಲಿ ಹಾಕಿದಾಗ ಹೇಗೆ ಸ್ಪೋಟವಾಗುತ್ತದೆ ಎಂದು ತೋರಿಸುತ್ತಿದ್ದರು.ಇದರ ಬಗ್ಗೆ ತುಂಬಾ ಜಾಗ್ರತೆಯಿಂದ ಇರಬೇಕು ಎಂದು ಅಧ್ಯಾಪಕರು ತಿಳಿಸುತ್ತಿದ್ದರು.ಆಗ ಸನತ್ ಅವರಿಗೆ ಸವಾಲು ಹಾಕಿ,ತಾನೂ ಈ ಬಗ್ಗೆ ಮಾಡುವುದಾಗಿ ಮುಂದೆ ಬಂದ.ಅಧ್ಯಾಪಕರು ಬೇಡ ಬೇಡ ಎಂದರೂ ಆ ಪ್ರಯೋಗವನ್ನು ತಾನು ಮಾಡಿದ. ಅದು ಅಲ್ಲಿಯೇ ಸ್ಪೋಟಗೊಂಡು, ಸನತ್ ಮುಖ,ಕೈ ಗೆ ತಾಗಿತು.ಒಮ್ಮೆಗೆ ಉರಿ ಬಂದು ಜೋರಾಗಿ ಕಿರುಚಿ ಕೆಳಗೆ ಬಿದ್ದ. ಕೂಡಲೇ ಅಲ್ಲಿದ್ದವರು ಅವನನ್ನು ಆಸ್ಪತ್ರೆಗೆ ಸೇರಿಸಿ,ಅವನ ಮನೆಗೆ ವಿಷಯ ತಿಳಿಸಿದರು. ವಿಷಯ ತಿಳಿದ ಅವನ ತಂದೆ ತಾಯಿ ಗಾಬರಿಯಿಂದ ಆಸ್ಪತ್ರೆಗೆ ಬಂದರು. ಆವಾಗಲೇ ಡಾಕ್ಟರ್ ರವರು ಅವನಿಗೆ ಬ್ಯಾಂಡೆಜ್ ಹಾಕಿ ಮಲಗಿಸಿದ್ದರು.ಅಧ್ಯಾಪಕರು ವಿಷಯ ತಿಳಿಸಿದಾಗ ತನ್ನ ಮಗನ ಹುಂಬತನಕ್ಕೆ ಅವರಿಬ್ಬರೂ ನಾಚಿಕೆಪಟ್ಟರು.ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಿಂದ ಹೆಚ್ಚಿನ ಅನಾಹುತ ಆಗದ ಬಗ್ಗೆ ಡಾಕ್ಟರ್ ಹೇಳಿದರು. ಸನತ್ ನು ತನ್ನ ಅಧ್ಯಾಪಕರಲ್ಲಿ ತನ್ನ ತಪ್ಪಿನ ಬಗ್ಗೆ ಕ್ಷಮೆ ಕೇಳಿದ. ಸನತ್ ನ ತಂದೆ ತಾಯಿ ಯರು ತನ್ನ ಮಗನ ಜೀವ ಉಳಿಸಿದ ಬಗ್ಗೆ ಅಧ್ಯಾಪಕರಿಗೆ ಧನ್ಯವಾದ ಹೇಳಿದರು. ಇನ್ನಾದರೂ ಅವನಿಗೆ ಬುದ್ದಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.


✍️ ಮಾಲತಿ ರಮೇಶ್ ಕೆಮ್ಮಣ್ಣು.

No comments:

Post a Comment

ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...

ಹೊನ್ನತಂತಿ ಕವನ ಸಂಕಲನ ಓದಿರಿ

 ಪುಸ್ತಕದ ಹೆಸರು : ಹೊನ್ನತಂತಿ ಪ್ರಕಾರ : ಕವನ ಸಂಕಲನ ಸಂಪಾದಕರು : ಶ್ರೀಮತಿ ತುಳಸಿ (ಸಿಂಧು ಭಾರ್ಗವ), ಬೆಂಗಳೂರು ಬೆಲೆ : ₹120 ಪುಟಗಳು : 85 + 16 (ಒಟ್ಟು 100 ಪುಟಗ...