ಕವನ : ಮಳೆಯೆಂದು ಮರುಗಿದರೆ...
ಇಳೆಯ ದಾಹ ನೀಗಲೆಂದು
ಮಳೆಯು ಬಿಡದೆ ಸುರಿಯುತಿರಲು
ಜಳಕಮಾಡಿ ಕೊಳೆಯತೊಳೆಯಿತಿಂದು ಮರಗಳು
ಎಳೆಯ ಚಿಗುರು ನಲುಗಿದಾಗ
ಬಳಿಯಲಿರುವ ತರುಗಳೆಲ್ಲ
ಜಲದ ಭರವ ಕಂಡು ಭೀತಿಗೊಂಡು ನಿಂತವು ||
ಯಾರ ಶಾಪ ಯಾರ ಕೋಪ
ತೋರಿ ಬಂತು ಭಾರಿ ತಾಪ
ದಾರಿ ಯಾವುದೀಗವೆಮಗೆ ಜೀವವುಳಿಸಲು
ನೂರು ಕೊಳಗ ನೀರನೆತ್ತಿ
ಜೋರಿನಿಂದ ಸುರಿದ ಹಾಗೆ
ಧಾರೆಯಾಗಿ ಹರಿದು ಬರಲು ಸೂರು ಜಾರಿತು ||
ಜೀವಜಂತುಗಳಲಿ ತನಗೆ
ದೇವನಿತ್ತ ವರವಿದೆಂಬ
ಭಾವದಿಂದ ಮನುಜ ಮಾತ್ರ ಮೆರೆಯುತ್ತಿದ್ದನು
ಯಾವ ಭೂಮಿ ಗಾಳಿ ನೀರು
ಕಾವುದೆನ್ನನೆಂಬ ನಿಜವ
ನಾವ ನರನು ತಿಳಿದು ನಡೆವ ಬಾಳ ಪಥದಲಿ ||
ನೆಲವ ಬಗೆದ ಜಲವ ಕುಡಿದ
ಬೆಳೆದು ನಿಂತ ಮರವ ಕಡಿದ
ಛಲವ ತೊಟ್ಟು ಬೆಟ್ಟಗುಡ್ಡವನ್ನು ಕೊರೆದನು
ಒಲಿದ ಭೋಗ ಭಾಗ್ಯವೆಲ್ಲ
ನೆಲದ ಕರುಣೆಯೆಂಬ ಸತ್ಯ
ಮಲಿನ ಮನಕೆ ಹೊಳೆಯದಾಯ್ತು ಮಾಯೆಯಿಂದಲಿ ||
ತಾನು ಮಾಡಿದಂಥ ಕರ್ಮ
ಸೂನುಗಳನು ಕಾಡಲಿಹುದು
ಯಾನ ಗೈವ ವೇಳೆಯಲ್ಲಿ ನೋವನುಣಿಸುತ
ನಾನು ನನ್ನದೆಂಬ ಮೋಹ
ಹಾನಿಗೊಳಿಸಿತಲ್ಲ ಬುವಿಯ
ಬಾನ ಮೋಡ ಕರಗಿ ಸುರಿಯೆ ನಿತ್ಯ ಸಂಕಟ ||
ಎಲ್ಲ ಬಲ್ಲ ಮನುಜನಿಲ್ಲ
ಸೊಲ್ಲನುಲಿಯೆ ಕೇಳನಲ್ಲ
ನಿಲ್ಲಿಸಯ್ಯವೆನಲು ಕಿವಿಯ ಮುಚ್ಚಿಕೊಳುವನು
ಬಲ್ಲ ತಂತ್ರವನ್ನು ಬಳಸಿ
ಸಲ್ಲದಂಥ ಕಾರ್ಯವೆಸಗಿ
ಮೆಲ್ಲ ತಾನು ತನ್ನ ಪತನ ತಂದುಕೊಳುವನು ||
ಕಂಡು ಕೇಳದಂಥ ಸೋನೆ
ಮೊಂಡು ಹಿಡಿದು ಕಾಡುತಿರಲು
ಚೆಂಡಿನಾಟದಲ್ಲಿ ಸೋಲು ಖಚಿತ ಮನುಜಗೆ
ಉಂಡು ತಿಂದು ಸುಖವ ಹೊಂದಿ
ಭಂಡನಾಗಿ ಪುಂಡನಾಗಿ
ಮಂಡೆ ಕೆಟ್ಟ ನರನ ಕರ್ಮ ಬೆನ್ನು ಹತ್ತಿದೆ ||
✍️ವಿಹಾರಿ
ಹರಿನರಸಿಂಹ ಉಪಾಧ್ಯಾಯ

No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...